ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಗಳೂರು ಖಾಝಿ ಚೆಂಬರಿಕ ಉಸ್ತಾದ್ ನೀರಿನಲ್ಲಿ ಮುಳುಗಿ ಸಾವು: ಕಾಸರಗೋಡು ಎಸ್.ಪಿ.

ಮಂಗಳೂರು ಖಾಝಿ ಚೆಂಬರಿಕ ಉಸ್ತಾದ್ ನೀರಿನಲ್ಲಿ ಮುಳುಗಿ ಸಾವು: ಕಾಸರಗೋಡು ಎಸ್.ಪಿ.

Tue, 16 Feb 2010 03:00:00  Office Staff   S.O. News Service
ಕಾಸರಗೋಡು, ಫೆ.೧೫: ಹಿರಿಯ ಧಾರ್ಮಿಕ ವಿದ್ವಾಂಸ, ಬಹುಭಾಷಾ ಪಂಡಿತ, ಸುನ್ನೀ ನೇತಾರ, ಮಂಗಳೂರು ಖಾಝಿ ಅಲ್‌ಹಾಜ್ ಸಿ.ಎಂ.ಅಬ್ದುಲ್ಲ ಮುಸ್ಲಿಯಾರ್ ಚೆಂಬರಿಕ ಇಂದು ಮುಂಜಾನೆ ಅಸ್ತಂಗತರಾಗಿದ್ದಾರೆ. ಅವರ  ಮೃತದೇಹ ಇಂದು ಬೆಳಗ್ಗೆ ಅವರ ಮನೆಯಿಂದ ೨೦೦ ಮೀಟರ್ ದೂರದ ಸಮುದ್ರದಲ್ಲಿ ಪತ್ತೆಯಾಗಿರುವುದರಿಂದ ಖಾಝಿಯವರು ಹೇಗೆ ಮೃತಪಟ್ಟಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ. 

ಇಂದು ಮುಂಜಾನೆ ವೇಳೆ ಚೇಂಬರಿಕೆ ಬಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಕಾಸರಗೋಡು ಜಿಲ್ಲಾ ಪೊಲೀಶ್ ವರಿಷ್ಠಾಧಿಕಾರಿ ಪ್ರಕಾಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಖಾಝಿಯವರ ಮೃತದೇಹದ ಶ್ವಾಸಕೋಶ ಮತ್ತು ಹೊಟ್ಟೆಯಲ್ಲಿ ನೀರು ತುಂಬಿಕೊಂಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಮುಂಜಾನೆ ಹೊತ್ತು ನದಿ ತೀರದಲ್ಲಿ ಕಾಲು ಜಾರಿ ನೀರಿಗೆ ಬಿದ್ದಿರುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗ್ಗೆ ೬:೩೦ರ ಸುಮಾರಿಗೆ ಚೆಂಬರಿಕ ಬಳಿಯ ಸಮುದ್ರದಲ್ಲಿ ಮೃತದೇಹ ಪತ್ತೆಯಾಗಿದೆ. ಬೆಳಗ್ಗೆ ಸಮುದ್ರ ಬಳಿಯ ಬಂಡೆಕಲ್ಲೊಂದರಲ್ಲಿ ಚಪ್ಪಲಿ, ಟಾರ್ಚ್ ಹಾಗೂ ಊರುಗೋಲು ಸ್ಥಳೀಯರೋರ್ವರಿಗೆ ಕಂಡು ಬಂದಿದ್ದು, ಸಂಶಯಗೊಂಡು ನೋಡಿದಾಗ ಸಮುದ್ರದಲ್ಲಿ ಮೃತದೇಹ ತೇಲುತ್ತಿರುವುದು ಕಂಡುಬಂತು. ಕೊಡಲೇ ಸ್ಥಳೀಯರ ನೆರವಿನಿಂದ ಮೃತದೇಹವನ್ನು ದಡಕ್ಕೆ ಸರಿಸಿ ನೋಡಿದಾಗ ಖಾಝಿಯವರದ್ದೆಂದು ತಿಳಿದು ಬಂತು. ಬಳಿಕ ಘಟನೆ ಬಗ್ಗೆ ಹೊಸದುರ್ಗ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎನ್ನಲಾಗಿದೆ.

ಸಳ್ಥಕ್ಕೆ ಆಗಮಿಸಿದ ಡಿವೈ‌ಎಸ್‌ಪಿ ಪಿ.ಬಿ.ಹಬೀಬ್‌ರಹ್ಮಾನ್ ಮೃತದೇಹದ ಮಹಜರು ನಡೆಸಿ ಅನುಮಾನ ಉಂಟಾದುದರಿಂದ ಮರಣೋತ್ತರ ಪರೀಕ್ಷೆಗೆ ಪರಿಯಾರಂಗೆ ಕೊಂಡೊಯ್ಯಲು ತೀರ್ಮಾನಿಸಿದರು. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share: